Monday, July 13, 2020

ಅವ್ಯವಸ್ಥೆಗಳ ಆಗರ ಶೃಂಗೇರಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ



ಪ್ರೀತಮ್ ಹೆಬ್ಬಾರ್. ಚಿಕ್ಕಮಗಳೂರು

ವಿದ್ಯಾದೇವತೆ ಶಾರದೆಯ ನೆಲೆಬೀಡು ಆದಿಶಂಕರರು ಸ್ಥಾಪಿಸಿದ 4 ಪೀಠಗಳಲ್ಲಿ ಒಂದಾದ ಶೃಂಗೇರಿಯು ಚಿಕ್ಕಮಗಳೂರು ಜಿಲ್ಲೆಯ ಉತ್ತಮ ಪ್ರವಾಸಿ ತಾಣಗಳಲ್ಲೊಂದಾಗಿ ಗುರುತಿಸಿಕೊಂಡಿದೆ. 
ಇಂತಹ ಪ್ರವಾಸಿ ಕ್ಷೇತ್ರದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ ಅಂದರೆ ಅದನ್ನು ನಂಬಲು ಕೂಡ ಅಸಾಧ್ಯ. ಆದರೆ ಸುಮಾರು 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಈ ತಾಲ್ಲೂಕಿನಲ್ಲಿ ಸುಸಜ್ಜಿತವಾದ ತಾಲ್ಲೂಕು ಆಸ್ಪತ್ರೆ ಇಲ್ಲದಿರುವುದು ಇಂತಹ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಕಪ್ಪು ಚುಕ್ಕೆಯಾಗಿದೆ.
ಪ್ರಸ್ತುತ ತಾಲ್ಲೂಕು ಆಸ್ಪತ್ರೆಯನ್ನು ನೋಡಿದರೆ ಯಾವುದೋ ಪಾಳುಬಿದ್ದ ಕಟ್ಟಡದಂತೆ ಗೋಚರವಾಗುತ್ತದೆ. ಒಮ್ಮೆ ಆಸ್ಪತ್ರೆ ಒಳಹೊಕ್ಕು ನೋಡಿದರೆ, ಫಂಗಸ್ ಬಂದಿರುವ ಹಾಸಿಗೆಗಳು, ಸರಿಯಾಗಿ ತಿರುಗದ ಫ್ಯಾನ್ ಗಳು, ಎಷ್ಟೋ ವರ್ಷಗಳಿಂದ ತೊಳೆಯದೆ ಕಲೆಗಟ್ಟಿರುವ ವಾಷ್ ಬೇಷನ್ ಗಳು, ಗಂಟೆಗಟ್ಟಲೆ ಕಾದರೂ ನೀರು ಬರದ ನಲ್ಲಿಗಳು, ಮುರಿದು ಹೋಗಿರುವ ಬಾಗಿಲುಗಳು, ತುಕ್ಕು ಹಿಡಿದಿರುವ ಕಂಬಿಗಳು, ಕರೆಂಟ್ ಹೋದರೆ ಬೆಳಕಿಗೆ ಯಾವುದೇ ಪರ್ಯಾಯ ವ್ಯವಸ್ತೆಕೂಡ ಇಲ್ಲ. ಹೀಗೆ ಇನ್ನೆಷ್ಟೋ ಅವ್ಯವಸ್ಥೆಗಳಿರುವ ಆಸ್ಪತ್ರೆ ಶೃಂಗೇರಿ ಪಟ್ಟಣದಲ್ಲಿ ಇರುವುದು ವಿಪರ್ಯಾಸವೇ ಸರಿ. ಕೊರೋನದಂತಹ ಸಮಯದಲ್ಲೂ ಕೂಡ ಆಸ್ಪತ್ರೆಯನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಇಲಾಖೆಯ ಕಾರ್ಯದಕ್ಷತೆಯನ್ನು ಎತ್ತಿ ತೋರಿಸುತ್ತದೆ.
40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ತಾಲ್ಲೂಕಿನಲ್ಲಿ ಯಾರಿಗಾದರೂ ಏನಾದರೂ ತುರ್ತು ಚಿಕಿತ್ಸೆ ಬೇಕಿದ್ದಲ್ಲಿ ದೂರದ ಶಿವಮೊಗ್ಗ, ಮಣಿಪಾಲ ಅಥವಾ ಮಂಗಳೂರು ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ತುರ್ತುಪರಿಸ್ಥಿತಿ ಅಷ್ಟು ದೂರ ಹೋಗುವುದರೊಳಗೆ ರೋಗಿಗೆ ಏನಾದರೂ ಸಮಸ್ಯೆಯಾದರೆ ಅದಕ್ಕೆ ಯಾರು ಹೊಣೆ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. 
ಅದೂ ಅಲ್ಲದೆ ಇದು ಪ್ರಸಿದ್ಧ ಪ್ರವಾಸಿ ಕ್ಷೇತ್ರ ವಾಗಿರುವುದರಿಂದ ಪ್ರವಾಸಿಗರು ಕೂಡ ತುರ್ತು ಸಂದರ್ಭಗಳಲ್ಲಿ ಈ ಆಸ್ಪತ್ರೆಗೆ ಭೇಟಿ ನೀಡಿಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಈಗಾಗಲೇ ತಾಲ್ಲೂಕು ಆಸ್ಪತ್ರೆಗೆ 100 ಬೆಡ್ ಗಳ ಸುಸಜ್ಜಿತ ಆಸ್ಪತ್ರೆ ಮಂಜೂರಾಗಿದ್ದರೂ ಕೂಡ ಇದುವರೆಗೂ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸುವ ಯಾವುದೇ ಕಾರ್ಯಗಳು ಕೂಡ ಪ್ರಾರಂಭಗೊಂಡಿಲ್ಲ. 
ತಾಲ್ಲೂಕು ಆಸ್ಪತ್ರೆಯಲ್ಲಿ ಇರುವುದು ಇಬ್ಬರೇ ವೈದರು:
ತಾಲ್ಲೂಕು ಆಸ್ಪತ್ರೆಯಲ್ಲಿ ವೈದರ ಸಂಖ್ಯೆ ಕೂಡ ಕಡಿಮೆಯಿದೆ ಈ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಅದರಲ್ಲೂ ಒಬ್ಬರು ಕೊರೋನಾ ಕರ್ತವ್ಯದಲ್ಲಿದ್ದು ಇನ್ನೊಬ್ಬ ವೈದ್ಯರು ರಜೆ ಪಡೆದರೆ ಸಣ್ಣ ಪುಟ್ಟ ಕಾಯಿಲೆಗೂ ಕೂಡ ಕೊಪ್ಪ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗುತ್ತದೆ.
ಈ ಎಲ್ಲಾ ಅವ್ಯವಸ್ಥೆಯಿಂದ ಬೇಸತ್ತಿರುವ ಕೆಲವು ಸಾರ್ವಜನಿಕರು ಸಾಮಾಜಿಕ ಜಾಲತಾಣದ ಮೂಲಕ ಶೃಂಗೇರಿ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಎಂಬ ಅಭಿಯಾನಕೂಡ ಪ್ರಾರಂಭವಾಗಿದೆ.
ಈ ಬಗ್ಗೆ ಕ್ಷೇತ್ರದ ಶಾಸಕರು, ಸಂಬಂಧಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಆದಷ್ಟು ಬೇಗ ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕಾಗಿದೆ.

ಸದ್ಯಕ್ಕೆ ನಮಗಿರುವ ಮಾಹಿತಿ ಪ್ರಕಾರ ನೂರು ಹಾಸಿಗೆಯ ಆಸ್ಪತ್ರೆ ಮಂಜೂರು ಆಗಿದೆ ಅಂತ ತಿಳಿದು ಬಂದಿದೆ. ಆದರೆ ಇದುವರೆಗೂ ಅದರ ಬಗ್ಗೆ ಯಾವುದೇ ಬೆಳವಣಿಗೆ ಗಳು ಕಂಡುಬರುತ್ತಿಲ್ಲ.
ಹಾಗಾಗಿ ಊರಿನ ಜನರ ಅದರಲ್ಲೂ ಬಡ ಜನರ ಆರೋಗ್ಯ ರಕ್ಷಣೆಗಾಗಿ ರಾಜಕೀಯ ಭಿನ್ನಾಭಿಪ್ರಾಯ ಬಿಟ್ಟು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗ 100 ಬೆಡ್ ಗಳ ಸುಸಜ್ಜಿತ ಆಸ್ಪತ್ರೆ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗಿದ್ದು ಅದರ ಜೊತೆಗೆ ವೈದ್ಯರ ಕೊರತೆಯನ್ನು ಕೂಡ ನೀಗಿಸಬೇಕಾಗಿದೆ ಈ ಬಗ್ಗೆ ಮೊದಲ ಹಂತವಾಗಿ ಸಾಮಾಜಿಕ ಜಾಲತಾಣ ಅಭಿಯಾನ ದಮೂಲಕ ಒತ್ತಡ ಹೇರುತ್ತಿದ್ದೇವೆ.ಇದಕ್ಕೆ ಜನಪ್ರತಿನಿಧಿಗಳು ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು

Thursday, July 9, 2020

ಬೆಂಗಳೂರು ಶ್ರೀರಾಮ ಸೇನೆ ವತಿಯಿಂದ "ಶ್ರೀಗುರುದೇವ ದತ್ತ ಜಪಯಜ್ಞ"



 ಬೆಂಗಳೂರು ನಗರ ಶ್ರೀರಾಮ ಸೇನೆ ವತಿಯಿಂದ ನಗರದ ಶ್ರೀ ವಿದ್ಯಾವಾಚಸ್ಪತಿ ಸಂತೋಷ ಗುರೂಜೀಯವರ ಆಯುರ್ ಆಶ್ರಮದಲ್ಲಿ "ಒಂದು ಕೋಟಿ ಶ್ರೀಗುರುದೇವ ದತ್ತರ" ಜಪದ ಯಜ್ಞ ಮಾಡಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಸಂತೋಷ ಗುರೂಜೀ “ಹಿಂದೆ ಲೋಕ ಕಲ್ಯಾಣಕ್ಕಾಗಿ ಯಜ್ಞ ಯಾಗಾದಿಗಳನ್ನು ರಾಜ ಮಹಾರಾಜರು ಮಾದುತ್ತಿದ್ದರು, ಅದರೆ ಇಂದು ಶ್ರೀರಾಮ ಸೇನೆ ಒಂದು ಕೋಟಿ ಶ್ರಿಗುರುದೇವ ದತ್ತರ ಜಪ ಮಾಡುವುದರ ಮೂಲಕ ಕರೋನಾ ಓಡಿಸುವ ಮತ್ತು ದತ್ತ ಪೀಠವನ್ನು ಹಿಂದುಗಳಿಗೆ ಒಪ್ಪಿಸಬೇಕೆಂಬ ಮಹಾಸದುದ್ದೇಶದಿಂದ ಈ ಜಪಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇಂದಿನ ಈ ಧರ್ಮಕಾರ್ಯದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ” ಎಂದು ಆಶೀರ್ವದಿಸಿದರು.  

ಶ್ರೀರಾಮ ಸೇನೆಯ ಬೆಂಗಳೂರು ನಗರ ಅಧ್ಯಕ್ಷ ಚಂದ್ರಶೇಖರ್ (ಕೋಟೆ ಶೇಕಿ) ಮಾತನಾಡಿ ಹಿಂದೆ ಪ್ರಪಂಚದ ಅನ್ಯಾಯಗಳನ್ನು ಸರಿಪಡಿಸುವುದಕ್ಕೆ ದೇವರು ಅವತಾರ ಎತ್ತಬೇಕಿತ್ತು ಆದರೆ ಇವತ್ತು ಸಮಾಜದ ಓರೆಕೋರೆಗಳನ್ನು ತಿದ್ದುವುದಕ್ಕೆ, ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಹೋರಾಟ ನಡೆಸುವುದಕ್ಕಾಗಿ ಮತ್ತು ಅನ್ಯಾಯವನ್ನು ಹಿಮ್ಮೆಟ್ಟಿಸಿ ನ್ಯಾಯದ ಪರ ಹೋರಾಟಕ್ಕಾಗಿ ಶ್ರೀರಾಮ ಸೇನೆ ಇದೆ" ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಅರುಣ್ ಪರಮೇಶ್‍ರವರನ್ನು ಬೆಂಗಳೂರು ನಗರದ ನೂತನ ಕಾರ್ಯದರ್ಶಿಯನ್ನಾಗಿ ಅಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಎಂ.ಎಸ್.ಹರೀಶ್, ಬೆಂಗಳೂರು ನಗರದ ಪ್ರಧಾನ ಕಾರ್ಯದರ್ಶಿ  ಸುಂದ್ರೇಶ್ ನರ್ಗಲ್, ನಗರ ಸಂಘಟನಾ ಕಾರ್ಯದರ್ಶಿ ಅಮರನಾಥ್ ಹಾಗೂ ಇನ್ನಿತರ ಶ್ರೀರಾಮ ಸೇನೆಯ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Monday, July 6, 2020

ಮಲ್ಲಯುದ್ಧ ಮತ್ತು ಜಿಂಕೆ ಬೇಟೆಯ ಸ್ಮಾರಕ ಶಿಲ್ಪಗಳು ಪತ್ತೆ.


ಕಳಸ: ತಾಲ್ಲೂಕಿನ ಇಡಕಣಿ ಗ್ರಾಮದ ಹೆಮ್ಮಕ್ಕಿ ಎಂಬ ಪ್ರದೇಶದಲ್ಲಿ 12ನೇ ಶತಮಾನಕ್ಕೆ ಸೇರಿದ ವಿಶೇಷವಾಗಿರುವ ಎರಡು ಸ್ಮಾರಕ ಶಿಲ್ಪಗಳನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಸುಪ್ರೀತ ಕೆ.ಎನ್, ಕಳಸ ಅವರು ಪತ್ತೆ ಮಾಡಿದ್ದಾರೆ. 
ಮಲ್ಲಯುದ್ಧ ವೀರಗಲ್ಲು: ಹೆಮ್ಮಕ್ಕಿಯ ಕೋಟೆಮಕ್ಕಿ ಎಂಬ ಸ್ಥಳದಲ್ಲಿ ಮಲ್ಲಾಯುದ್ಧವನ್ನು ತೋರಿಸುವ ವೀರಗಲ್ಲು ಇದ್ದು, ಹಿಂದಿನ ಅಧ್ಯಯನವನ್ನು ಗಮನಿಸಿದಾಗ ದೇವಾಲಯದ ಭಿತ್ತಿಗಳಲ್ಲಿ ಮಲ್ಲಾಯುದ್ಧದ ದೃಶ್ಯವನ್ನು ಕೆತ್ತಿರುವುದನ್ನು ಗಮನಿಸಬಹುದು. ಆದರೆ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ವೀರಗಲ್ಲಿನಲ್ಲಿ ಮಲ್ಲಾಯುದ್ಧದ ಚಿತ್ರಣವನ್ನು ಕೆತ್ತಿರುವುದು ಬೆಳಕಿಗೆ ಬಂದಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ. ಈ ವೀರಗಲ್ಲು 4.7 ಅಡಿ ಉದ್ದ ಮತ್ತು 3.3 ಅಡಿ ಅಗಲವನ್ನು ಹೊಂದಿದೆ. ವೀರಗಲ್ಲು ನಾಲ್ಕು ಹಂತವನ್ನು ಒಳಗೊಂಡಿದ್ದು ಕೆಳಗಿನ ಹಂತದಲ್ಲಿ ಮಲ್ಲಯುದ್ದದ ದೃಶ್ಯವನ್ನು, ಎರಡನೇ ಹಂತದಲ್ಲಿ ವೀರ ಮರಣವನ್ನು ಹೊಂದಿದ ವೀರನನ್ನು ಅಪ್ಸರೆಯರು ಪಲ್ಲಕ್ಕಿಯಲ್ಲಿ ಕರೆದೊಯ್ಯುವ ದೃಶ್ಯವಿದೆ, ನಂತರದ ಹಂತದಲ್ಲಿ ವೀರನು ಸ್ವರ್ಗದಲ್ಲಿರುವ ಚಿತ್ರಣವನ್ನು ಕೆತ್ತಲಾಗಿದೆ ಹಾಗೂ ಮೇಲಿನ ಹಂತವು ಪ್ರಸ್ತುತ ತೃಟಿತಗೊಂಡಿದೆ. ವೀರಗಲ್ಲಿನ ಕಲಾಶೈಲಿಯನ್ನು ಗಮನಿಸಿ ಇದರ ಕಾಲಮಾನವನ್ನು 12ನೇ ಶತಮಾನ ಎಂದು ಸಂಶೋಧಕರು ತಿಳಿಸಿದ್ದಾರೆ.
ಜಿಂಕೆ ಬೇಟೆ ವೀರಗಲ್ಲು: ಮಲ್ಲಯುದ್ಧ ಇರುವ ವೀರಗಲ್ಲಿನಿಂದ ಸುಮಾರು 2 ಕಿ,ಮೀ ದೂರದಲ್ಲಿ ಈ ಸ್ಮಾರಕ ಶಿಲ್ಪವಿದೆ. ಇದು 5 ಅಡಿ ಉದ್ದ ಮತ್ತು 2.6 ಅಡಿ ಅಗಳವಿದ್ದು ಈ ಸ್ಮಾರಕಶಿಲ್ಪವು ನಾಲ್ಕು ಹಂತಗಳನ್ನು ಒಳಗೊಂಡಿದ್ದು, ಕೆಳಗಿನ ಹಂತದಲ್ಲಿ ಬಿಲ್ಲು ಬಾಣವನ್ನು ಹಿಡಿದುಕೊಂಡು ವೀರನು ತನ್ನ ಬೇಟೆ ನಾಯಿಗಳೊಂದಿಗೆ ಜಿಂಕೆಯನ್ನು ಬೇಟೆಯಾಡುವ ದೃಶ್ಯವಿದೆ. ನಂತರದ ಹಂತದಲ್ಲಿ ಮರಣ ಹೊಂದಿದ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದೊಯ್ಯುವ ದೃಶ್ಯದ ಕೆತ್ತನೆಯಿದೆ. (ಬೇಟೆಯಾಡುವ ಸಂದರ್ಭದಲ್ಲಿ ಯಾವುದೋ ಒಂದು ಅವಘಡದಿಂದ ವೀರನು ಮರಣ ಹೊಂದಿರಬೇಕೆಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ). ನಂತರದ ಹಂತದಲ್ಲಿ ವೀರನ ಸತಿಯರು  ಕೈಮುಗಿದು ಕುಳಿತಿರುವ ಚಿತ್ರಣವಿದೆ. ಮೇಲಿನ ಹಂತದಲ್ಲಿ ಸೂರ್ಯ-ಚಂದ್ರ, ಶಿವಲಿಂಗ, ನಂದಿ, ಹಸು ಮತ್ತು ಕರುವಿನ ಕೆತ್ತನೆಯಿದ್ದು, ವೀರನು ಸ್ವರ್ಗಸ್ತನಾದ ಎಂಬ ಚಿತ್ರಣವನ್ನು ತೋರಿಸಿ ಕೊಡುತ್ತದೆ. ಈ ರೀತಿಯ ಜಿಂಕೆ ಬೇಟೆಯಾಡುವ ವೀರಗಲ್ಲು ಕರ್ನಾಟಕದಲ್ಲಿ ಈ ಮೊದಲು ಬೆಂಗಳೂರಿನ ಬನಶಂಕರಿಯಲ್ಲಿ ಹಾಗೂ ಕಳಸದ ಮರಸಣಿಗೆ ಎಂಬ ಪ್ರದೇಶದಲ್ಲಿ ದೊರೆತಿದೆ. ಮರಸಣಿಗೆ ಮತ್ತು ಹೆಮ್ಮಕ್ಕಿಯಲ್ಲಿ ದೊರೆತ ಈ ಜಿಂಕೆ ಬೇಟೆಯ ಸ್ಮಾರಕಶಿಲ್ಪಗಳನ್ನು ಗಮನಿಸಿದಾಗ ಇಲ್ಲಿ ಜಿಂಕೆಗಳು ಅಧಿಕವಾಗಿದ್ದವು ಎಂದು ಕಂಡುಬರುತ್ತದೆ.ಈ ಹಿನ್ನಲೆಯಲ್ಲಿ ಮಲ್ಲಯುದ್ಧ ಮತ್ತು ಜಿಂಕೆ ಬೇಟೆಯಾಡುವ ಸ್ಮಾರಕಶಿಲ್ಪಗಳು ವಿಶೇಷವೆನಿಸಿವೆ ಎಂದು ಸುಪ್ರೀತ ಕೆ.ಎನ್ ಕಳಸ ಇವರು ಅಭಿಪ್ರಾಯ ಪಟ್ಟಿದ್ದಾರೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸುಮಂತ್ ಕೆ.ಎನ್ ಕಳಸ, ಅವಿನ್ ಗೌಡ ಅಬ್ಬುಗುಡಿಗೆ, ಪ್ರೀತಮ್ ಹೆಬ್ಬಾರ್, ಪರಮೇಶ್ವರ್ ಹೆಬ್ಬಾರ್ ಅವರು ಸಹಕಾರ ನೀಡಿದ್ದರು.